ರಂಗನಾಯಕ ರಾಜೀವ ಲೋಚನ ರಮಣನೆ ಬೆಳಗಾಯಿತು

ರಂಗನಾಯಕ ರಾಜೀವ ಲೋಚನ ರಮಣನೆ ಬೆಳಗಾಯಿತು ಏಳೆನ್ನುತ
ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳು ಶೃಂಗಾರದ ನಿದ್ದೆ ಸಾಕೆನ್ನುತ || ಪ ||

ಪಕ್ಷಿರಾಜನು ಬಂದು ಬಾಗಿಲಲ್ಲಿ ನಿಂದು ಅಕ್ಷಿ ತೆರೆದು ಬೇಗ ಈಕ್ಷಿಸೆಂದು
ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತ ಸೂಕ್ಷ್ಮದಲಿ ನಿನ್ನ ಸ್ಮರಿಸುವವೋ ಕೃಷ್ಣ || ೧ ||

ಸನಕ ಸನಂದನ ಸನತ್ಸುಜಾತರು ಬಂದು ವಿನಯದಿಂ ಕರ ಮುಗಿದು ಓಲೈಪರು
ಘನಶುನಕ ಶೌನಕ ವ್ಯಾಸವಾಲ್ಮೀಕರು ನೆನೆದು ನೆನೆದು ಕೊಂಡಾಡುವರು ಹರಿಯೇ || ೨ ||

ಸುರರು ಕಿನ್ನರರು ಕಿಂಪುರುಷರು ಉರಗರು ಪರಿಪರಿಯಲಿ ನಿನ್ನ ಸ್ಮರಿಸುವರು
ಅರುಣನು ಬಂದು ಉದಯಾಚಲದಲಿ ನಿಂದು ಕಿರಣ ತೋರುವನು ಭಾಸ್ಕರನು ಶ್ರೀಹರಿಯೆ || ೩ ||

ಪದುಮನಾಭನೆ ನಿನ್ನ ನಾಮಾಮೃತವನ್ನು ಪದುಮಾಕ್ಷಿಯರು ತಮ್ಮ ಗೃಹದೊಳಗೆ
ಉದಯದೊಳೆದ್ದು ಸವಿದಾಡುತ್ತ ಪಾಡುತ್ತ ದಧಿಯ ಕಡೆವರೇಳೋ ಮಧುಸೂದನ ಕೃಷ್ಣ || ೪ ||

ಮುರಮಥನನೆ ನಿನ್ನ ಚರಣದ ಸೇವೆಯ ಕರುಣಿಸಬೇಕೆಂದು ತರುಣಿಯರು
ಪರಿಪರಿಯಿಂದಲೆ ಸ್ಮರಿಸಿ ಹಾರೈಪರು ಪುರಂದರವಿಠಲ ನೀನೇಳೋ ಶ್ರೀಹರಿಯೆ || ೫ ||

 

Leave a Reply

*

This site uses Akismet to reduce spam. Learn how your comment data is processed.