ಸಂಪತ್ತು ಶುಕ್ರವಾರದ ಹಾಡು

ಹರನ ಕುಮಾರನ ಚರಣಕಮಲಕ್ಕೆರಗಿ ಶಾರದೆಗೆ ವಂದಿಸುವೆ || ಶರಧಿಶಯನಗೆ ಸೆರಗೊಡ್ಡಿ ಬೇಡುವೆ ಶರಧಿ ಸುತೆಯ ಕಥೆಯೊರೆಯುವೆ || ೧ ||

ಸಾಕ್ಷಾತ್ ಶ್ರೀ ಹರಿವಕ್ಷಸ್ಥಳವಾಸಿಯೆ ಇಕ್ಷುಕ್ಷೇಪಣನನ್ನೆ ಪಡೆದ | ಮೋಕ್ಷದಾಯಕಳೆ ಶ್ರೀ ಲಕ್ಷ್ಮಿಯೆ ಕರುಣ ಕಟಾಕ್ಷದಿ ನೋಡಬೇಕೆನ್ನ || ೨ ||

ಶ್ರಾವಣ ಮಾಸದ ಮೊದಲ ಶುಕ್ರವಾರ ಮಾಧವನರಸಿ ಮಹಾಲಕ್ಷ್ಮಿ | ದೇವಿಯ ಮಹಿಮೆ ಕೊಂಡಾಡುವದೀ ಕಥೆ ಕೇಳುವುದು ಕಿವಿಗೊಟ್ಟು ಜನರು || ೩ ||

ಇರುತಿರಲೊಂದು ಪಟ್ಟಣದೊಳು ಬ್ರಾಹ್ಮಣ ಮಡದಿ ಮಕ್ಕಳು ಸಹಿತಾಗಿ | ಹಿಡಿದು ತಂಬೂರಿ ತಂಬಿಗೆಯ ಗೋಪಾಳಕ್ಕೆ ಬಿಡದಯು ಮನೆ ತಿರುಗುತಲಿ || ೪ ||

ಸೊಸೆಯರು ನಾಲ್ಕು ಮಂದಿಯು ಗಂಡು ಮಕ್ಕಳು ಹಸುಗೂಸುಗಳು ಮನೆತುಂಬ | ಅಶನವಸನಕ್ಕಿಲ್ಲ ಹಸಿದ ಮಕ್ಕಳಿ ಗ್ವಾಲು ಮೊಸರು ಅನ್ನವು ಮೊದಲಿಲ್ಲ || ೫ ||

ಅತಿ ಗುಣವಂತರು ಗತಿಯಿಲ್ಲ ಗ್ರಾಸಕ್ಕೆ ಮಿತಭೋಜನವ ಮಾಡುವರು | ವ್ರತ ನೇಮ ನಿಷ್ಠೆ ನಿರತ ದರಿದ್ರರು ಶ್ರೀಪತಿ ಸತಿ ದಯದಿ ನೋಡುವಳು || ೬ ||

ಒಂದು ದಿನದ ಬಂದ ಮಂದಿ ಮಂದಿರದಲ್ಲಿ ಚಂದಾದ ಸುಣ್ಣ ಸಾರಣೆಯು | ರಂಗವಲ್ಲಿಯ ಚಿತ್ರ ಬಣ್ಣ ಕಾರಣೆ ಮಾಡಿ ಮುಂದೆ ತೋರಣ ಕಟ್ಟಿಹರು || ೭ ||

ಮನೆ ಮನೆಯಲ್ಲಿ ಮಹಾಲಕ್ಷ್ಮಿದೇವಿಯರ ಚಟ್ಟಿಗೆ ಬರುವುದನೆ ತಾ ಕಂಡು | ಇದು ಏನು ನೋಂಪಿ ಎನಗೆ ಹೇಳ ಬೇಕೆಂದು ಘನಭಕ್ತಿಯಿಂದ ಕೇಳಿದನು || ೮ ||

ಕ್ಷೀರಸಾಗರದಲ್ಲಿ ಹುಟ್ಟಿದ ಮಹಾಲಕ್ಷ್ಮಿ ದೇವಿ ದೇವರ ಪಟ್ಟದರಸಿ || ಶ್ರಾಅವಣಮಾಸ ಸಂಪತ್ತು ಶುಕ್ರವಾರ ನಾವು ಪೂಜೆಯ ಮಾಡಬೇಕು || ೯ ||

ಎನಗೊಂದು ಚಟ್ಟಿಗೆ ಬರೆದು ಕೊಟ್ಟರೆ ನಮ್ಮ ಮನೆಯೊಳಿಟ್ಟು ಪೂಜಿಪೆನು | ವಿನಯದಿಂದೇಳಿಕೊಂಡರೆ ಒಂದು ಚಟ್ಟಿಗೆ ಬರೆದುಕೊಟ್ಟರು ಬಲಗೈಲಿ | ೧೦ ||

ಸಿರಿದೇವಿ ಚಟ್ಟಿಗೆ ಹಿಡಿದು ಗೋಪಾಳಕ್ಕೆ ಹೋದನು ಮನೆ ಮನೆಯಲ್ಲಿ | ಗೋಧಿ ಅಕ್ಕಿ ಬೇಳೆ ತುಪ್ಪವ ತಂದು ಇತ್ತರು ಹಿಡಿ ಹಿಡಿರೆನುತ || ೧೧ ||

ತಂದ ಪದಾರ್ಥವ ತನ್ನ ಹೆಂಡತಿ ಕರೆದು ಮುಂದಿಟ್ಟು ವಾರ್ತೆಯನ್ನು ಹೇಳಿದನು | ಇಂದಿರೆ ದೇವಿ ಹಾಗೆಂದು ಪೂಜೆಯ ಮಾಡಿ ಆ ನಂದವ ಕೊಡುವಳು ನಮಗೆ || ೧೨ ||

ಕಬ್ಬು ಬಿಲ್ಗೊಡೆವ ಕಾಮನ ಮಾತೆ ಮಹಾಲಕ್ಷ್ಮಿ ಉರ್ವಿಯೊಳುತ್ತ ಮಳೀಕೆ | ಹಬ್ಬದೂಟಕೆ ಬಂದ ಬ್ರಾಹ್ಮಣರಿಗೆ ಮತ್ತೊಬ್ಬ ಮುತ್ತೈದೆಗೇಳೆಂದ || ೧೩ ||

ಚಿಕ್ಕ ಸೊಸೆಯು ಎಣ್ಣೆ ಕುಂಕುಮ ಕೈಯಲ್ಲಿ ತಕ್ಕೊಂಡು ನಡೆದಾದಿಯಲಿ | ಚೊಕ್ಕೆ ಚಿನ್ನದ ಗೊಂಬೆಯಂತಿದ್ದ ಮುತ್ತೈದೆ ಫಕ್ಕನೆ ಕೇಳಿದಳು || ೧೪ ||

ಹುಡುಗಿ ನೀನೆ ಪೋಗುವೆಯೆ ನಿಮ್ಮನೆಯಲ್ಲಿ ಅಡಿಗೆಯೇನೇನು ಮಾಡುವಿರೆ | ಹಿಡಿದೆಣ್ಣೆ ಕುಂಕುಮ ಕೊಡುವುದಿನ್ಯಾರಿಗೆ ಕೊಡಬಾರದೇನೆ ನೀನೆನಗೆ || ೧೫ ||

ಯಾರಾದರೇನಮ್ಮ ದಾರಿ ನೋಡದ ಮುಂಚೆ ನೀನೆ ಬಾ ನಮ್ಮ ಮಂದಿರಕೆ | ಹೇಳಿ ಮುತ್ತೈದೆ ಹಿಗ್ಗಿದಳಂದಕ್ಕೆ ಮಾವನ ಮುಂದರುಹಿದಳು || ೧೬ ||

ಮನೆಯ ಸಾರಿಸಿ ಸುಣ್ಣ ಸಾರಣೆ ರಂಗೋಲೆ ಬರೆದು ಬಾಗಿಲಿಗೆ ಬಣ್ಣವನು | ತಳಿರು ತೋರಣ ಕಟ್ಟಿ ಸರ್ವ ಸಂಭ್ರಮದಿಂದ ಎರೆದುಕೊಂಡರೆಲ್ಲರು ಬೇಗ || ೧೭ ||

ಕಮಲ ಕೇದಗೆ ಕಬ್ಬು ಕದಳಿಕಂಬ ಬಾಳಿ ಗೊನೆ ಕಟ್ಟಿ ಚಿತ್ರ ಮಂಟಪವು || ಎಡಬಲದಲ್ಲಿ ನಾಲ್ಕು ನಂದಾದೀವಿಗೆ ಹಚ್ಚಿ ನಡುವೆ ಶ್ರೀ ಪದ್ಮ ಪೀಠಗಳು || ೧೮ ||

ಚಟ್ಟಿಗೆ ಒಳಗ್ಗಾಕಿ ಐದು ಫಲವು ತುಂಬಿ ಮುತ್ತೈದೆರೆಲ್ಲರು ನೆರೆದು |ಕಟ್ಟಿದರು ತೋರಣ ಮಾಂಗಲ್ಯ ಮಹಲಕ್ಷ್ಮಿಗೆ ಪ್ರತಿಷ್ಠೆ ಮಾಡಿದರು ಸಂಭ್ರಮದಿ || ೧೯ ||

ಅರಿಸಿನ ಕುಂಕುಮ ಗಂಧ ಬುಕ್ಕಿಟ್ಟು ಗೆಜ್ಜೆ ವಸ್ಯ ಪಾರಿಜಾತ ಸಂಪಿಗೆಯ || ಮುಡಿಸಿ ಮಲ್ಲಿಗೆ ದಂಡೆ ಒಡೆಸಿ ತೆಂಗಿನಕಾಯಿ ಉಡಿತುಂಬುತ್ತತ್ತಿ ಫಲಗಳು || ೨೦ ||

ಭಕ್ಷ್ಯ ಶಾವಿಗೆ ಪರಮಾನ್ನ ಚಿತ್ರಾನ್ನಸ ಣ್ಣಕ್ಕಿ ಶಾಲ್ಯನ್ನ ಸೂಪಗಳು | ಚಕ್ಕುಲಿ ಗಿಲಗಂಚಿ ಚಂದುಬ್ಬೇರುವ ಹಪ್ಪಳ ಸಂಡಿಗೆ ಅಂಬೋಡೆಗಳು | ೨೧ ||

ಸಕ್ಕರೆ ಪೃತ ಕ್ಷೀರ ಸಕಲ ಪಕ್ವಾನ್ನ ಮಂಡಿಗೆ ಬೀಸೂರಿಗೆ ಗುಳ್ಳೋರಿಗೆಗಳು | ಚಂದ್ರನಂತ್ತೊಳೆವ ಶಾವಿಗೆ ಫಣೆ ಆ ದಿವ್ಯ ಬುಂದ್ಯ ಬುರಬುರಿ ಅನ್ನ ರಸವು || ೨೨ ||

ಬೇಕಾದ ಬೇಸನ್ನು ಬಿಳಿಯ ದಳೇದುಂಡಿ ಮೋತೀಚೂರು ಚೂರ್ಣಲಾಡು | ಸೇತು ಕಟಕದ ಬಿಳುಪಿನಂತೆ ಜಿಲೇಬಿ ಸಿಖೇದುಂಡಿ ಮುಖವಿಲಾಸಗಳು || ೨೩ ||

ಹೋಳಿಗೆಣ್ಣೂರಿಗೆ ಹೊಯೋಸೆಆಹಾರ ತೈಲದಿ ಕರಿದೂರಣ ಕಡುಬು || ಸುರಳಿಹೊಳಿಗೆ ಉದ್ದಿನಬೇಳೆ ಮೆಣಸಿನಕಾಯಿ ಇಂಗಿನಿಂದೊಪ್ಪುವ ಕಡುಬು || ೨೪ ||

ಸಾರು ಸಂಬಾರ ಸಾಸಿವೆಕಾಯಿ ಪಲ್ಯದ ಉ ಪೈರಿ ಉಪ್ಪಿನಕಾಯಿ ರಸವು | ಖೀರು ಮಾಲತಿ ಗವಲಿ ಪರಡಿ ಪರಮಾನ್ನ ಮು ಸ್ನಾರ ಚಟ್ಟಣೆ ಕೋಸಂಬಿಗಳು || ೨೫ ||

ಹಾಗಲಕಾಯಿ ಸೌತೆ ಹಂದರದವರೆ ಹೀರೆ ಬಾಳೆ ಬೆಂಡೆ ಕುಂಬಳವು | ಮಾಗಿದ್ಧ ಲಸಿನಕಾಯಿ ಕಲಸುಮೇಲೋಗರ ಗೆಣಸು ಗುಳ್ಳದಕಾಯಿ ಬೀಜಗಳು || ೨೬ ||

ನಿಂಬೆಭಾತು ಸೌತೆಭಾತು ಕೇಸರಿಭಾತು ಕೆನೆ ಕೆನೆ ಮೊಸರು ಒಗ್ಗರಣೆ | ಹಸಿ ಅಲ್ಲ ಬಿಸಿ ಹಾಲು ಹೊಸಬೆಣ್ಣೆಯಿಂದೊಷ್ಟೋ ಕಲಸ ವಾಳ್ಯಾಭಾತುಗಳು || ೨೭ ||

ಮುದ್ದು ಮಹಾಲಕ್ಷ್ಮಿಗೆ ನೈವೇದ್ಯ ಮಾಡಿದರು ಅನಿ ರುದ್ದ ಮೂರುತಿ ಸಹಿತಾಗಿ | ಶುದ್ಧ ಸುಣ್ಣವು ಎಲೆಯಡಿಕೆ ಯಾಲಕ್ಕಿ ಪತ್ರೆಕಾಯಿ ಕಾಚು ಲವಂಗ || ೨೮ ||

ಹಚ್ಚಿಕೊಂಡೆಲ್ಲರರಿಸಿನ ಗಂಧ ಕುಂಕುಮ ಎತ್ತಿ ಚಾಮರ ವೀಜಿಸುತಲೆ | ಅಚ್ಯುತನರಸಿ ಅನುಗ್ರಹದಿ ನೋಡಿದಳ್ ಮೆಚ್ಚಿ ಮುಚ್ಚಿದ ಕಣ್ಣನ್ನು ತೆರೆದು || ೨೯ ||

ಅಮರಾದಿ ಸುರರೊಡೆಯನು ರಾಜಲಕ್ಷ್ಮಿಗೆ ಸರುವ ಸಮರ್ಪಣೆ ಮಾಡಿ | ನಮೋ ನಮೋಯೆಂದು ಕೈ ಮುಗಿದು ಮಂತ್ರಾಕ್ಷತೆ ಶಿರದಲಿ ತೂರುತ ಬೇಡುವರು || ೩೦ ||

ಹಾಡುತ್ತ ಪಾಡುತ್ತ ಮಾಡುತ್ತ ಲಾರತಿ ಬೇಡುತ್ತ ಮುಡಿದ ಮಲ್ಲಿಗೆಯ | ನೋಡುತ್ತ ನಲಿಯುತ್ತಲಿರಲು ತಾ ದಯ ಮಾಡುತ್ತ ಕೊಟ್ಟಳಾಗೊರವ || ೩೧ ||

ಹೊತ್ತು ಬಹಳಾಯಿತು ಮುತ್ತೈದೆ ಬರಲಿಲ್ಲ ಮತ್ತೇನು ಇದಕೆ ಉಪಾಯ || ಅಷ್ಟು ಅಡಿಗಿ ಯಲೆ ಬಡಿಸಿ ಕುಂಕುಮ ವೀಳ್ಯ ಇಷ್ಟು ಪುಟ್ಟಿಯನೆ ಮುಚ್ಚಿದರು || ೩೨ ||

ಗಂಡ ಹೆಂಡಿರು ಕೂಡಿ ಬ್ರಾಹ್ಮಣರೊಡಗೂಡಿ ಉಂಡು ವೀಳ್ಯವನೆ ತಕ್ಕೊಂಡು | ಇಂದು ನಮಗೆ ಜಯ ಶುಭ ಕಾಲ ಬಂದಿತು ಹೀ ಗೆಂದು ಸಂತೋಷ ಪಡುವರು || ೩೩ ||

ಮರುದಿನ ಸಂಪತ್ತು ಶನಿವಾರ ಹಿಟ್ಟಿನ ಕಡಬು ಅಂಬಲಿ ಪರಮಾನ್ನ | ತಿಳಿ ಗಾಣದೆಳ್ಳೆಣ್ಣೆ ಹಿಂಡಿ ಪಲ್ಯನೆ ಗೌರಿ ಪೂಜೆ ಮಾಡಿಟ್ಟರು ನೈವೇದ್ಯವನು || ೩೪ ||

ಎರಡನೆ ಶುಕ್ರವಾರ ದಿನ ಮುತ್ತೈದೆಗೆ ದೃಢವಾಗಿ ಹೇಳಿ ಬಾಯೆನುತ | ಎಣ್ಣೆಗೈಯ ಮುಚ್ಚಿಕೊಂಡೆಣ್ಣೆ ಕುಂಕುಮ ವನು ಹಿಡಿದಳಿನ್ನೊಂದು ಪಥವನು || ೩೫ ||

ಬೀಡರ ಬಿಟ್ಟು ಬದಲು ಮಾರ್ಗ ಹಿಡಿಯಲು ಹಾದಿಗೆ ಬಂದಡ್ಡ ಗಟ್ಟಿ | ಆದಿ ಶುಕ್ರವಾರ ಹೇಳಿ ಯನ್ನನೆ ಬಿಟ್ಟು ದಾರಿಗೇಳುವಿಯೆ ಭೋಜನಕೆ | ೩೬ ||

ನಮ್ಮ ಗೊಡವೆ ಯಾತಕಮ್ಮ ನಿಮಗೆ ಸುಮ್ಮನೊಗು ಶುಕ್ರವಾರದಲ್ಲಿ | ನಿಮ್ಮ ಎಲೆಯ ಬಡಿಸಿ ಅಂದಿಗಿಂದಿಗೆ ಅದೆ ಉಣ್ಣ ಬೇಕದರ್ಹೋಗಮ್ಮ || ೩೭ ||

ತಂಗಳುಟಗಳುಂಬೊ ಕಂಗಾಲಿ ನಾನಲ್ಲ ಬಂಗಾರದಂತ ಮುತ್ತೈದೆ || ತಿಂಗಳಾಗಲಿ ಹಂಗು ನೂಲುಕಟ್ಟಿನಲಿತಂಗಳ ನಿನಗುಣಿಸುವೆನು || ೩೮ ||

ಬಡಿವಾರದ ಮಾತೇಕೆ ಬಡಿಸಿಟ್ಟೆಲೆಯನುಂಬೊ ಬಡವೆಯಲ್ಲ ನಾ ಭಾಗ್ಯವಂತೆ | ತಡೆಯದೆ ಬರುವೆನು ತಾ ಎಣ್ಣೆ ಕುಂಕುಮ ಹಿಡಿದೆಳಕೊಂಡು ನಡೆದಳು || ೩೯ ||

ಕೊಟ್ಟೆಣ್ಣೆ ಕುಂಕುಮ ಥಟ್ಟನೆ ನಡೆದಳು ಅಷ್ಟು ವಾರ್ತೆಯನೆ ಹೇಳಿದಳು | ಇಂಥ ಧಿಟ್ಟ ಮುತ್ತೈದೆ ದೇಶದ ಮೇಲೆ ಕಾಣೆನು ಎಟ್ಟೆಳಲಾಕೆ ಚಲ್ವಿಕೆಯ || ೪೦ ||

ಸಿರಿದೇವಿ ಪೂಜೆ ನೈವೇದ್ಯಗಳಾದವು ಬಡಿದವು ಮೂರು ಘಂಟೆಗಳು | ಬರಲಿಲ್ಲ ಮುತ್ತೈದೆಯೆಂದೆಲೆ ಬಡಿಸಿಟ್ಟು ಸರುವರೂಟವನೆ ಮಾಡುವರು || ೧ ||

ಮೂರನೆವಾರ ಮುತ್ತೈದೆಗೇಳುವರು ಮ ತ್ಯಾರೆಂದ್ವಿಚಾರ ಮಾಡುವರು || ಮಾವನವರೆ ಮುದ್ದು ಮಾತ ನೋಡಿರಿಯೆಂದು ತಾನ್ನೊಳದಿನ್ನೊಬ್ಬ ಸೊಸೆಯು || ೪೨ |

ಮುಡಿಬಾಗಿ ಮುಚ್ಚಿಕೊಂಡೆಣ್ಣೆ ಕುಂಕುಮವನ್ನು ನಡೆದಳಿನ್ನೊಂದು ಓಣಿಯಲಿ | ಬಡಬಡ ಬಂದು ಕೈ ಹಿಡಿದೆಣ್ಣೆ ಕುಂಕುಮ ಕೊಡುವದಿನ್ಯಾರಿಗೌತಣವ || ೪೩ ||

ಔತಣವಲ್ಲಮ್ಮ ಅತಿ ಬಡವರು ನಾವು ಗತಿಯಿಲ್ಲ ಗೌರಿ ಹಬ್ಬಕ್ಕೆ | ಸುತರಾಡಹೋಗ್ಯಾರೆ ಹುಡುಕುತ ಬಂದೆ ಬಿಡು ದಾರಿ ಪತಿ ಬೈವನೆನ್ನ ಮನೆಯಲ್ಲಿ || ೪೪ ||

ಒಗುವುತನದ ಮಾತಿನ ಬಗೆ ನಾನು ಬಲ್ಲೆನು ಹಗರಣಗಿತ್ತಿ ನೀನ್ದೇ || ಮೊದಲಿನ ಶುಕ್ರವಾರ ಹೇಳಿ ಎನ್ನನೆ ಬಿಟ್ಟು ಬದಲು ಮತ್ತೆದೆನ್ನೇಳುವರೆ | ೪೫ ||

ಎರಡು ವಾರವು ಹಸಬೂದಡಿವೊಟಾಯಿತು ಬರಡಾಕಳ್ಳಿನ ಉಂಡಂತೆ || ಕಡಲೆಹೂರಣ ಕರಿಗಡಬು ಕಡೆದ ಬೆಣ್ಣೆ ಕಾಸಿದ ತುಪ್ಪ ಬಡಿಸೆನಗೆ || ೪೬ ||

ಮೆಚ್ಚಿಕೊಂಡಳಾಕೆ ಮಾತಿಗೆ ಮರುಳಾದಳು ಹಚ್ಚಿ ಕುಂಕುಮ ಎಣ್ಣೆ ಕೊಟ್ಟು | ನಿಶ್ಚಯವೇನಮ್ಮ ನೀನಿ ಬರುವದೆಂದು ಈ ಕ್ಷಣ ಬರುವೆನೊಗೆಂದಳು || ೪೭ ||

ಕೊಟ್ಟೆಣ್ಣೆ ಕುಂಕುಮ ಥಟ್ಟನೆ ಬಂದಳು ಒಂದೊಂದನ್ನು ಮಾಡಿ ವರ್ಣಿಸುತ | ಇಂದಾಕೆ ಮನಕೆ ಬಂದಂತಡಿಗೆ ಮಾಡು ಹೀ ಗೆಂದು ಸಂತೋಷಪಡುವರು || ೪೮ ||

ಕಡಲೆ ಹೂರಣ ಕಸಿಕಸಿ ಕೊಬ್ಬರಿ ಯಾಲಕ್ಕಿ ಪುಡಿದ್ರಾಕ್ಷೆ ಉತ್ತತ್ತಿ ಹಳಕು | ಕಲಿಸಿ ಕಲ್ಲು ಸಕ್ಕರೆ ಕರಿಗಡಬು ಬೆಣ್ಣೆ ಕಾಸಿದ ತುಪ್ಪವು ಸೋಸಿಲಿಂದ | ೪೯ |

ಸಿರಿದೇವಿ ಪೂಜೆ ನೈವೇದ್ಯಗಳಾದವು ಹೊರಗಾರು ಗಂಟೆ ಬಡಿದವು ! ಬರಿದೆ ಬಾರಿಸದೆ ಬರಿಯ ಮಾತಿನ ಜಾಣೆ ಬರಲಿಲ್ಲಾಗೆಂದು ನುಡಿದರು || ೫೦ ||

ಹುಟ್ಟಿದ ಮೇಲಿಂಥ ಕಡಬು ಕಂಡಿದ್ದಿಲ್ಲ ನಿಮೂಟ ಉಂಡವರು ನಾವಲ್ಲ |ಮುತ್ತೈದೆ ಪುಣ್ಯದಿಂದ ಊಟ ದೊರಕಿತೆಂ ದವರು ನಗುತ ನುಡಿದರು || ೫೧

ನಾಲ್ಕನೇ ವಾರ ನಾನ್ಹೇಳಿ ಬರುವೆನೆಂದ ಆಕೆ ಹೋದಳು ಹಿರಿಯ ಮಗನರಸಿ | ಬೇಕಾದವರು ಬಂದು ಕಾಡಿದರೂ ಕೂಡ ಯಾಕೆ ನನಗೊಬ್ಬರ ಭಿಡೆಯು || ೫೨ ||

ದೊಡ್ಡ ಬಾಗಿಲ ಬಿಟ್ಟು ದಿಡ್ಡಿ ಬಾಗಿಲ ಮುಂದೆ ಸದ್ದು ಮಾಡದೆ ಬರುತಿರಲು || ವಜ್ರದ ಗೊಂಬೆಯಂತೊಳೆವ ಮುತ್ತೈದೆ ನಿಂ ತಿದ್ದಾಳಾಗೆದುರಿಗೆ ಬಂದು | ೫೩ ||

ಸರ್ವರೊಳಗೆ ಹಿರಿಯ ಸೊಸೆಯು ನೀನೆಂಬಂಥ ಗರುವಾಹಂಕರದಿ ನೀನು | ಸರಿಯಾಗಿ ಮೂರು ವಾರ ಹೇಳಿಯನ್ನನು ಕರೆಯದುಂಬುವ ಕಾರಣವೇನು || ೫೪ ||

ಕರಿಲಿಕ್ಕೆ ಬರಲಿಕ್ಕೆ ಕಾಣೆ ನಿಮ್ಮನು ನಾನು ತಿರುಗುವಿ ನಾರದರಂತೆ | ಇರುವ ಮಂದಿರವ ತೋರಿದರೀಗ ನಾ ನಿಮ್ಮ ಕರೆದುಣಿಸುವೆ ನಿಮಗಿಂದು || ೫೫ ||

ದೂರುಂಟು ನಮ್ಮನೆ ದಾರಿ ಅಸಾಧ್ಯವು ನೋಡಿ ಬಂದವರು ದಾರಿಲ್ಲ | ಆಹಾರ ನಿದ್ರೆ ಸಂಸಾರ ಸಮುದ್ರವು ಮೀರಿದವರಿಗೆ ಕಾಂಬುವದು || ೫೬ ||

ಮಧ್ಯಾಹ್ನ ಹೊತ್ತಿಗೆ ಸಿದ್ದಾಗಿ ಬರುವೆನು ಭದ್ರವಾದ್ವಚನವ ಕೊಡುವೆನು | ಶುಭ್ರವಾದಂಥ ಕೊಬ್ಬರಿ ಭಾರಿಬಟ್ಟಲು ತರಿ ಸಿಟ್ಟು ಕಡಲಿ ತುಂಬುವದು || ೫೭ |

ಆಗಾರದೊಳಗಿನ ಅರಗಿಣಿ ಮರನೇರಿ ಮಾಗಿದ ಫಲವ ಮೆದ್ದಂತೆ | ಬೇಗ ಬಂದೀಗ ನಿಮ್ಮನೆಯಲ್ಲೂಟವ ಮಾಡಿ ತೇಗುತ್ತ ತೃಪ್ತಳಾಗುವೆನು || ೫೮ ||

ಮಾಯಾ ದೇವಿಯ ಮಾಯಾಮಾತಿಗೆ ಮರುಳಾಗಿ ತಾ ಕೊಟ್ಟಳೆಣ್ಣೆ ಕುಂಕುಮವ || ನಾ ಹೋದಕಾರ್ಯಕ್ಕೆ ಮಾಗೋದು ಹಣ್ಣೆಂದು ಹೇಳಿಕೊಂಡಳು ಶಿಫಾರಸ್ಸು || ೫೯ ||

ವರಗೌರಿಪೂಜೆ ನೈವೇದ್ಯಗಳಾದವು ಹೊರಗ್ಗತ್ತು ತಾಸು ಮೀರಿದವು ! ಬರಲಿಲ್ಲ ಮುತ್ತೈದೆಯೆಂದರೆ ಬಡಿಸಿಟ್ಟು ಸರ್ವರೂಟವನೆ ಮಾಡಿದರು || ೬೦ ||

ಬಂದಿತಾಗೈದನೆ ವಾರ ಮುತ್ತೈದೆಗೆ ಇಂದು ನೀ ಹೇಳಿ ಬಾಯೆನುತ || ಹೆಂಡತಿ ಕರೆದು ಹೇಳಿ ಕುಂಕುಮೆಣ್ಣೆ ತ ಕ್ಕೊಂಡು ತಾ ನಡೆದಳು ಬೇಗ || ೬೧ ||

ಬೀದಿಯ ಬಿಟ್ಟು ಬದಲಾದಿಗೆ ಬಂದಳು ಹಾದಿಗೆ ಬಂದಡ್ಡ ಕಟ್ಟಿ | ನೀನು ದಯಮಾಡಿ ಬಂದೆಯೆನಗೌತಣ ಆದರಿಂದೇಳುವದೇಕೆ || ೬.೨ ||

ಜಪ್ಪಿಸಿಬಂದು ಔತಣವ ತಕ್ಕೊಂಡು ನೀ ತಪ್ಪಿಸಿಕೊಂಡು ಹೋಗುವರೆ || ಒಪ್ಪತ್ತಾದರೂ ಊಟ ಮಾಡದವರ ಮಾತು ಒಪ್ಪಿಕೊಂಬುವದ್ಗೀಗೆ ಹೇಳಮ್ಮ || ೬೩ ||

ಬಂದ ಔತಣ ಗಂಡ ಮಕ್ಕಳ ಭಾಗ್ಯ ಒಲೈಂಬುವರುಂಟೆ ಲೋಕದಿ | ಕಂಡಲ್ತಣ ಹೇಳಿ ಕರೆಯದಿರುವದೇನೆ ಚಂದವೆ ನಿಮ್ಮ ನಡತೆಯ || ೬೪ ||

ಲಕ್ಷಣವಂತೆ ನಾನೆದುರಿಗೆ ಬಂದರೆ ಲಕ್ಷಣ ಶುಭಶಕುನಗಳು | ಇನ್ನು ಮೇಲೆ ಜೇನು ಇಟ್ಟಂತೆ ಬರುವೆನು ಲಕ್ಷಿಸರಿಗೆ ನಾ ಕೂಡುವೆನು | ೬೫ ||

ಅವಕಾಶ ಕೊಡುವೆನು ಸಾವಕಾಶ ಅಡಿಗೆ ಮಾಡು ದಿನಕರ ಮುಳುಗೋ ಕಾಲದಲಿ | ದನಕರು ಬರುವ ವೇಳೆಗೆ ಬರುವೆನು ಮನಕೆ ಸಂದೇಹ ಬೇಡೆನಿತು || ೬೬ ||

ಅಂಗಳ ಸಾರಸು ರಂಗು ತೋರಣ ಕಟ್ಟು ರಂಗವಲ್ಲಿಯ ಚಿತ್ರ ಬರೆದು | ಅಂಬರೂದಿನಕಡ್ಡಿ ಅರಮಗೆ ಬಾಗಿಲ ಮುಂದೊಂದು ನಡಿಸೆ ಹಿಲಾಲು | ೬೭ ||

ಮಡಿಸೀರೆಯನು ಬಿಟ್ಟು ಮಡಿ ಪೀತಾಂಬರವುಟ್ಟು ಕಡಗ ಕಂಕಣ ಕೈಯಲ್ಲಿಟ್ಟು | ದೃಢವಾದ ಮುತ್ತಿನ ಮುಖರೆವೊಂದಡ್ಡಿಕೆ ಬು ಗುಡಿ ಬಾವುಲಿ ಹೊಳೆಯುತಲಿ || ೬೮ ||

ಕಂಚುಕ ಕಲಶ ಕದಲಾರತೆ ತಕ್ಕೊಂಡು ಮುಂಚೆ ಬಂದಿದಿರುಗೊಂಡೆನ್ನ | ಮಿಂಚಿನಂತ್ತೊಳೆವ ಚಿನ್ನದ ಹಲಿಗೆ ತೂಗೋ ಮಂಚದಿ ಬಂದು ಕೂಡುವೆನು || ೬೯ ||

ಅರಮನೆಯಲ್ಲಿ ನಾವಿರುವ ಮೂರಂಕಣ ಮನೆಮುಂದೆ ಮುರುಕು ಚಪ್ಪರವು | ಮರದ ಮಣೆ ನಮ್ಮಲ್ಲಿರುವುದೆ ಹಲಿಗೆಯ ತೂಗುವ ಮಂಚವೆಲ್ಲಿ ತರುವೆನೆ || ೭೦ ||

ಬಂಗಾರದ ಬಾಳೆ ಎಲೆ ಬೆಳ್ಳಿ ಬಟ್ಟಲು ಮಂಡಿಗೆ ತುಪ್ಪ ಸಕ್ಕರೆಯು | ಉಂಡು ಕೂಡುವೆನೆ ಕುಂದಣ ಕೆತ್ತಿದ ತಬಕದಲೆ ತಂದು ನೀಡೆನಗೆ ತಾಂಬೂಲ |೭೧ ||

ಹುಟ್ಟಿದ ಮೇಲೆ ಈ ಬಟ್ಟಿಲೇಲಿ ಸುಣ್ಣ ಹಚ್ಚಿಕೊಂಡು ನಾನರಿಯೆ | ಕರ್ಪೂರದ ಅಡಿಕೆ ಮುತ್ತಿನ ಸುಣ್ಣ ಬಿಳಿಯಲೆ ಹಚ್ಚಿ ನೀ ಮಡಿಚಿ ಕೊಡು ಎನಗೆ || ೭೨ ||

ಬಂಗಾರೆಂಬುದು ನಮ್ಮ ಕಂಗಳು ಕಂಡಿಲ್ಲ ಮಂಗಳಸೂತ್ರದೊಂದೊರತು | ಕುಂದಣದ ತಬಕಿಲ್ಲ ಒಡಕೊಂದು ಹಿತ್ತಾಳಿ ತುಂಡಾದ ತಾಳೊಂದಿರುವುದು || ೭೩ ||

ಮಡಿಸೀರೆ ಬಿಟ್ಟರಿನ್ನೊಂದು ಸೀರೆನಗಿಲ್ಲ ಮಡಿಪೀತಾಂಬರವ ಕಂಡಿಲ್ಲ | ಕಡಗಕಂಕಣವಿಲ್ಲ ಕರಿಯ ಕಾಚಿನ ಬಳೆ ಇರಲು ಮನೆ ಮರ ನಮಗೆ | ೭೪ ||

ಬುಟ್ಟಿದ ಬುಗುಡಿ ಅಂಚು ಜರತಾರಿ ಅಂಚು ಚಿನ್ನದಿ ಥಳಕಿಸುವ | ಕುಪ್ಪಸ ಹೊಲಸಿ ಕೊಟ್ಟರೆ ಒಂದರಕ್ಷಣ ತೊಟ್ಟು ನಿಮಗೆ ಬಿಡುವೆ || ೭೫ ||

ಹುಟ್ಟು ಬಡವರು ನಾವಷ್ಟ ದರಿದ್ರರು ನಿತ್ಯ ಯಾತ್ರೆಯಲ್ಲಿ ಬದುಕುವರು | ಚಿತ್ತಕೆ ತಂದು ನೀ ದಯಮಾಡಿ ಬರುವದೆಂ ದೃಸ್ತವ ಮುಗಿದು ಹೇಳಿದಳು || ೭೬ ||

ಕಡೆಯ ವಾರವು ಕಾಮಧೇನಂತೆ ಬರುವೆನು ಕರೆದುಕೊ ಮನದ ಇಷ್ಟಾರ್ಥ || ನಡೆದು ಬರುವ ನಾಲ್ಕು ವಾರದ ದಕ್ಷಿಣೆ ಕೊಡು ನಾನು ಬಿಡುವವಳಲ್ಲ |೭೭ ||

ಒಂದೊಂದು ಮಾತನಾಡುವಳು ಮುತ್ತೈದೆ ಬಾ ಯಿಂದ ಮುತ್ತದುರುವಂದದಲಿ | ಆನಂದದಿಂದ ಕುಂಕುಮಚ್ಚೆಣೆ ಕೊಟ್ಟು ಬಂದಳು ತನ್ನ ಮಂದಿರಕೆ || ೭೮ ||

ಸಾಧ್ಯವಲ್ಲವು ಭಾಳಸಾಧ್ಯ ಮತ್ತೈದೆ ನಿಂ ತಿದ್ದಳಾಗೆದುರಿಗೆ ಬಂದು | ನಿದ್ರೆ ಕನಸೊ ಎಚ್ಚರಿದ್ದಿಲ್ಲ ಎನಗೊಂದು ನಿರ್ಧಾರವಾಗಿ ತಿಳಿಯದು || ೭೯ ||

ಗತ್ತಿನ ಮಾತು ಸಮಸ್ತ ಚಾತಯ ಸಂ ಪತ್ತಿನ ಸೌಭಾಗ್ಯವಂತೆ | ಎಷ್ಟೆಳಲಾಕೆ ಚಂದದ ಚಿಕೆ ಸಾಕ್ಷಾತ್ ವಿಷ್ಣುವಾದರೆ ಮೋಹಿಸುವವನು || ೮೦ ||

ನಮ್ಮ ಪುಣ್ಯದ ಫಲ ಒದಗಿ ಬಂದಿದ್ದರೆ ಮನ್ನಿಸಿ ಮನೆಗೆ ಬರುವಳು | ಇನ್ನೇನು ಮಾಡೋಣೆಂದಿದಕೆಂದಾಲೋಚಿಸಿ ಇನ್ನೊಬ್ಬ ಮುತ್ತೈದೆಗೇಳುವುದು | ೮೧ ||

ಪಾಲು ಸಕ್ಕರೆ ಪಂಚಭಕ್ಷ್ಯ ಪರಮಾನ್ನವು ಸಾರು ಶಾಕಗಳು ಶಾಲ್ಯನ | ಮಾಲಕ್ಷ್ಮಿ ಪೂಜೆ ನೈವೇದ್ಯ ಮಾಡಿ ಮಂಗ ಳಾರತಿಯನೆ ಬೆಳಗುವರು || ೮೨ ||

ಪಕ್ಷಿವಾಹನ ಪುರುಷೋತ್ತಮನಾದ ಅ ಧೋಕ್ಷಜ ಆ ಪರಮಾತ್ಮ || ಅಕ್ಷಯಸೂತ ಅಡಗುವ ಕಾಲವನ್ನು ನಿ ರೀಕ್ಷಿಸಿ ನೋಡುತ್ತಿದ್ದಳು || ೮೩ ||

ಮತ್ತೆ ಮಾಲಕ್ಷುಮಿ ಪಚ್ಚಕರ್ಪೂರ ಪುನಗಿನ ಎಣ್ಣೆ ಸಂಪಿಗೆಯ ತೈಲ | ಕಸ್ತೂರಿ ಬೆರೆಸಿದ ಬಿಸಿನೀರು ಅರಿಸಿನ ಹಚ್ಚಿ ತಾನೆರಕೊಂಡಳಾಗ |೮೪ ||

ಸುರಳುಂಗುರಳಿಗೆ ಬೈತಲೆ ತಿದ್ದಿ ತಳುಪ್ಪಾಕಿ ಚೌರಿ ರಾಗುಟೆ ಚಂದ್ರಗೊಂಡೆ | ಗಿಳಿಗೆಜ್ಜೆ ಹೆರಳು ಬಂಗಾರ ಕೇದಿಗೆ ಮೇಲೆ ಅರಳು ಮಲ್ಲಿಗೆ ಮಾಲೆ ಮುಡಿದು || ೮೫ ||

ಬಿಚ್ಚಿ ತಾನುಟ್ಟಳು ಬಿಳಿಯ ಪೀತಾಂಬರ ಬಿಚ್ಚಿ ವಜ್ರದ ಸೆರಗೊದ್ದು | ಕುಣಿ ಕುಪ್ಪಸ ಮುತ್ತಿನ ಗೊಂಡೆ ತೋಳಿಗೆ ಕಟ್ಟುತ್ತಿದ್ದಳು ಬಾಜು ಬಂದು || ೮೬ ||

ವಜದ ವಂಕಿ ನಾಗಮುರಿಗಿಯಡ್ಡಿಕೆ ಗೆಜ್ಜೆಕೆ ಕೊರಳಲ್ಲಿ | ದೊಡ್ಡ ಸರಿಗೆ ಮೇಲಡ್ಡಿಕೆ ಮುತ್ತಿನ ಕೆಂಪು ಥಳಕು ಬಳಕು ಹೊಳೆಯುತಲಿ || ೮೭ ||

ಮುತ್ತಹಳಿಸರ ಚಂದ್ರಹಾರ ಮೋಹನಮಾಲೆ ಕಟ್ಟಿದಳಾಗ ಕಂಠಿ ಕಟ್ಟಾಣಿ | ಪಚ್ಚೆ ಮಾಣಿಕ್ಯ ರತ್ನ ಪದಕ ಅದರ ಮೇಲೆ ಜತ್ತಾಗಿ ನಡೆದಾಡುತಿರಲು || ೮೮ ||

ಕಡಗಂಕಣಹಸ್ಯ ಕಡಗಕಮಲದ್ವಾರ ನಡುವಿಗೆ ನವರತ್ನ ಪಟ್ಟಿ | ಬಿಡಿ ಮುತ್ತು ಬಿಗಿದೋವಾಲೆ ಬುಗುಡಿ ಚಂದ ಮುರುವು ಮುತ್ತಿನ ಸರಪಣಿಯ || ೮೯ ||

ಸಾಲು ಕುಂದಣಮುತ್ತಿನ ಮುಖರೆ ಬುಲಾಕು ಜಾಲಕದೊಲ್ವಜದ್ದರಳು | ತಿಳಿ ಕಾಡಿಗೆ ಹಚ್ಚಿ ತಿದ್ದಿ ಕುಂಕುಮ ಹಚ್ಚಿ ಮೇಲೆ ಜೋಳದ ಕುಡಿಯಂತೆ |೯೦ ||

ಪಿಲ್ಲೆ ಕಾಲುಂಗುರ ಲುಲ್ಲು ಪೈಜಣರುಳಿ ಘಲ್ಲು ಘಲ್ಲೆಂದ್ದೆಜ್ಜೆಯನಿಡುತ || ತೆಳ್ಳನೆ ಪಾದ ಪುತ್ತಳೆಯಂತೆ ಚಿನ್ನದ ಬಳ್ಳಿಯಂದದಲಿ ಬಳುಕುತಲಿ | ೯೧ ||

ಬೆಳ್ಳನೆ ಬೆಳ್ಳಿಯ ಮಿಳ್ಳಿ ತನ್ನುಂಗುರ ಬಿನಲಿ ಹಿಡಿದಲ್ಲಾಡಿಸುತಲಿ || ಗು ಮಿಂಚುಗಳಂತೆ ಥಳಥಳಿಸುತ ಬೀದಿ ಯಲಿ ಬಂದಳು ಗಜಗಮನೆ || ೯೨ ||

ದೇವಲೋಕದಿಂದ ಇಳಿದಿಲ್ಲಿ ಬಂದಳೋ ಹರಸತಿಯ ಅರಸುತಿ | ಮೋರೆ ನೋಡಲು ಮೂರ್ಛ ಬರುವುದು ದಾರೋ ಮುಂಗಾರಿ ಮಿಂಚುಗಳಂತೆ ತೋರುವುದು || ೯೩ ||

ಇಂದ್ರನರಸಿಯೋ ಚಂದ್ರಮನ ರೋಹಿಣಿಯೋ ಸುಂದರ ಸೂರ್ಯನರಸಿಯೊ ಸತಿಯೋ | ಗಂಧರ್ವನರಸಿಯೋ ಗಗನದಿಂದಿಳಿದಂತೆ | ಗಂಗಾ ಶ್ಯಾಮಲೆ ಸೀತಾಂಗನೆಯೋ || ೯೪ ||

ರತಿಯೊ ರೇವತಿಯೊ ಅರುಂಧತಿ ಪಾರ್ವತಿಯೊ ಭಾರತಿ ಭಾಗ್ಯವಂತೆ ಸರಸ್ವತಿಯೊ | ಪತಿಗಳೆವರ ಸತ್ಯಪಾಂಡವರರಸಿಯೊ – ಪದಿ ಬಂದಳಿಲ್ಲಿಗೆಂಬುವರು || ೯೫ ||

ಸತ್ಯಭಾಮೆಯೋ ರುಕ್ಷ್ಮಿಣಿ ಜಾಂಬುವಂತೆಯೊ ಅಷ್ಟಮ ಸ್ತ್ರೀಯರೊಳಗೆ ಈಕೆ ದಾರೋ | ಶ್ರೇಷ್ಠ ವೈಕುಂಠ ಕೊಲ್ಲಾಪುರ ಮಾಲಕ್ಷ್ಮಿ ಬಿಟ್ಟಲ್ಲಿ ಬಂದಳೆಂಬುವರು || ೯೬ ||

ಹಸ್ತವ ಮುಗಿವರು ಸಾಷ್ಟಾಂಗವೆರಗುವರು ಇತ್ತ ಬಾ ಎನುತ ಕರೆಯುವರು | ಈಹೊತ್ತು ಸಂಪತ್ತು ಶುಕ್ರವಾರ ಸಾಕ್ಷಾತ್ತು ಲಕ್ಷ್ಮಿ ಬಂದಳಿಲ್ಲೆಂಬುವರು || ೯೭ ||

ರಾಜಾಧಿರಾಜರೆಲ್ಲರು ನಿಂತಿ ನೋಡಲು ಲಾಜಾವರದ ಗೊಂಬೆಯಂತೆ | ಭೋಜನಕೆ ಹೋಗುವಳು ನೋಡೋಣೆಂದು ಬಹು ಜನರು ನಿಂತು ನೋಡುವರು || ೯೮ ||

ಮುಡಿಬಾಗಿ ನಡೆಯುತ ಮುಡಿದದ್ದು ಉದುರಿಸುತ ಮುಗುಳ್ ನಗೆಯಿಂದ ನಗುತಲಿ || ಎಡಬಲದ ವಾರೆನೋಟವು ನೋಡುತ ನಡೆದಳು ಬಡವರ ಮನೆಗೆ || ೯೯ ||

ಸಿರಿದೇವಿ ತಾ ಕಣ್ಣು ತೆರೆದು ನೋಡುತಲಿರೆ ಅರಮನೆಯಾಯಿತಾಕ್ಷಣದಿ | ಸುರಗಿ ಮಲ್ಲಿಗೆ ಶಾವಂತಿಗೆ ನಾನಾ ಫಲಗಳ ವನವಾದವಾ ಮನೆಸುತ್ತ || ೧೦೦ ||

ಗಚ್ಚಿನಂಗಳದಿ ವೃಂದಾವನ ಕಟ್ಟಿ ಕಾರಂಜಿ ಅಚ್ಚನೆ ಗಿಳಿ ಮೋಹ ತುರಂಗ | ಪಕ್ಷಿ ನವಿಲು ಪಾರಿವಾಳ ಪಾರಿಜಾತ ವೃಕ್ಷ ಅಶ್ವತ್ಥ ಗಿಡಗಳು || ೧೦೧ ||

ಪಚ್ಚದಂತ್ತೊಳೆವ ಶ್ರೀತುಲಸೀದೇವಿಯಲ್ಲಿ ಅಚ್ಚ ವಜ್ರದ ಗೊಂಬೆಯಂತೆ | ಲಕ್ಷ್ಮಿ ತಾನಲಿಯುತ ಹಿತದಿ ಅರ್ಚಿತವಾದ ಕುರ್ಚಿಯಲಿ ಬಂದು ಕೂಡುವಳು || ೧೦೨ |

ಬಡವನ ಮಡದಿಗೆ ವಡವೆ ವಸ್ತ್ರವಾಯಿತು ಕಡಗಕಂಕಣವು ಕೈಯಲ್ಲಿ | ಮಡಸೀರುದ್ಯೋಗಿ ಮಡಿಪೀತಾಂಬರವಾಯು ಸಡಗರದಿಂದೆದುರು ಗೊಂಬುವರು || ೧೦೩ ||

ಗಂಧ ಕುಂಕುಮ ಅರಿಸಿನ ದಿವ್ಯ ಬುಕ್ಕಿಟ್ಟು ತಂದ್ಬಚ್ಚಿ ತಿಲಕ ಫಣೆಯಲ್ಲಿ || ದುಂಡುಮಲ್ಲಿಗೆ ಪಾರಿಜಾತ ಸಂಪಿಗೆ ಮಾಲೆ ದಂಡೆ ಮುಡಿಸುವರು ಜಡೆ ಮುಡಿಗೆ || ೧೦೪ ||

ಕಿತ್ತಳೆ ಫಲವು ಕೊಬ್ಬರಿಬಟ್ಟಲೊಳು ಹುರಿ ಕಡಲೆ ಹಾಕ್ಕುಡಿಯ ತುಂಬುವರು | ಹಿಡಿದು ಕುಂದಣಹರಿವಾಣದೊಳಾಡಿ ಪಾಡುತ ಮಾಡಿ ಮುತ್ತಿನಾರತಿಯ || ೧೦೫ ||

ಇಂದಿರಾದೇವಿ ಆನಂದದಿ ಕುಳಿತಿರೆ ಇಂದ್ರಾದಿ ಸುರರು ನೋಡುತಲಿ | ಮಂದಾರಮಲ್ಲಿಗೆ ಮಳೆಯ ಕರೆದಾಗ ದುಂದುಭಿ ಭೇರಿಯ ಹೊಡೆದರು || ೧೦೬ ||

ಎಡಬಲದಲ್ಲಿಟ್ಟ ಚಾಮರವನ್ನೆ ಬೀಸುವರು ಹಿಡಿದು ನೋಡುವರು ಹಿಲಾಲು | ಬಿಡಿಮಲ್ಲಿಗೆ ತಂದು ನಳಿಮುಡಿಗ್ಲಾಕೋರು ಸಡಗರದಿಂದೆದ್ದಳಾಗ || ೧೦೭ ||

ಲಕ್ಕುಮಿದೇವಿ ತಾ ಫಕ್ಕನೆ ಬಂದಳು ಹೊಕ್ಕಳು ದೇವರ ಮನೆಯ | ಚೊಕ್ಕ ಚಿನ್ನದ ಕೊಡವಾಗಿ ತೂಗೋ ಮಾಣಿಕ್ಯ ಮಂಚದಲಿ ಕೂಡುವಳು || ೧೦೮ ||

ರತ್ನ ಮಾಣಿಕ್ಯ ನವ ರತ್ನದ ಹೊನ್ನು ಚೊಕ್ಕ ಚಿನ್ನದ ಮೂರು ಹಾರಗಳು ಬಣ್ಣದವಳ ಮುತ್ತು ಭಾರಿ ಬಂಗಾರ ಬಂದು ಮಂದಿ ನೋಡುತಿಹರು || ೧೦೯ ||

ಶುಕ್ರವಾರವೆ ಶುಭಕಾಲ ಇವರಿಗೆ ಸಿಕ್ಕಳು ಸಿಂಧುನಂದನೆಯು | ಲೋಕದ ಭಾಗ್ಯ ಭಂಡಾರ ಜಯಲಕ್ಷ್ಮಿ ದಕ್ಕಿದಳವರಿಗೆಂಬುವರು || ೧೧೦ ||

ನಾಲ್ಕು ವಾರದ ಎಲೆ ತೆಗೆದು ನೋಡುತಲಿರೆ ಹಾಕಿದ್ದವು ಆಣಿಮುತ್ತು | ಪಾಕಪಲ್ಯವು ಪಚ್ಚೆ ಪರಮಾನ್ನ ಬಂಗಾರ ದರ್ಚಿತ ಬಾಳೆ ಎಲೆಯು || ೧೧೧ ||

ಬಂದು ನೋದಿದರು ನಾಲ್ಕು ಸೊಸೆಯರು ಹಂಚಿ ಕೊಂಡರಾಗೊಂದೊಂದೆಲೆಯ | ಹಿಂದೆ ಮಾಡಿದ ಪುಣ್ಯ ಬಂದೊದಗಿತು ನಮ ಗೆಂದು ಸಂತೋಷ ಪಡುವರು || ೧೧೨ ||

ಕರ್ಪೂರದಾರತಿ ಮಾಡಿ ಕಾಯಿ ಒಡೆದು ಬುಕ್ಕಿಟ್ಟು ಕುಂಕುಮ ಹಚ್ಚುವರು | ಪಟ್ಟಣದ ಜನರು ಪತ್ತಲ ಸೀರೆ ಕುಪ್ಪಸ ಲಕ್ಷ್ಮಿಗುಡುಗೊರೆ ಕೊಡುವರು || ೧೧೩ ||

ಬಡವನ ಮನೆಗೆ ನಡೆದು ಬಂದು ಭಾಗ್ಯದ ಕೊಡವಾಗಿ ಕೂತಂಥ ಕಥೆಯ | ದೃಢಭಕ್ತಿಲಿಂದ್ದೇಳಿ ಕೇಳಿದ ಜನರಿಗೆ ಸಾಯುಜ್ಯ ಪದವಿ ಕೊಡುವಳು || ೧೧೪ ||

ಮುದದಿಂದ ಮೂಜಗದೊಡೆಯ ನಾರಾಯಣ ನೆದೆಯಲ್ಲಿರುವ ಲಕ್ಷ್ಮಿ ನಮ್ಮ ||ಸದನಕ್ಕೆ ಬಂದು ಶುಕ್ರವಾರ ಸಮದೃಷ್ಟಿಯಿಂದ ನೋಡುವಳು || ೧೧೫ ||

ಗಂಡ ಹೆಂಡಿರು ಕೂಡಿ ಬ್ರಾಹ್ಮಣರೊಡಗೂಡಿ ಉಂಡು ವೀಳ್ಯವನೆ ತಕ್ಕೊಂಡು || ಮಂದಗಮನೆ ಲಕ್ಷಮಹಿಮೆ ಕೊಂಡಾಡುತ ಆ ನಂದವಾಗಿರುತ್ತಿದ್ದರವರು || ೧೧೬ ||

ಕಿವುಡರಿಗೆ ಕಿವಿ ಕುರುಡರಿಗೆ ಕಣ್ಣು ಬರುವುದು ಬರಡಾಕನಾಗುವದು || ಹಡೆಯದ ಬಂಜೆ ಹೊಟ್ಟೆಯಲ್ಲಿ ಮಕ್ಕಳಾಗುವರು ಪಡೆವರು ಇಷ್ಟ ಫಲ ಫಲಗಳ || ೧೧೭ ||

ದನಕರು ತಳಿಯಾಗಿ ಧನಧಾನ್ಯ ಬೆಳೆಯಾಗಿ ಸಿದ್ದಿಕಾಲ ಶುಭಕಾರ್ಯವಾಗಿ | ಬರಿ ಕುಂಕುಮರಿಸಿನ ಮಾಂಗಲ್ಯ ಮುತ್ತೆದೆ ತನವನನುವಾಗಿ ಕೊಡುವಳು || ೧೧೮ ||

ಸಾಮಜವರದ ಸುಧಾಮಸಖನಾದ ಸ್ವಾಮಿ ಶ್ರೀಹರಿ ಮೋಹದರಸಿ || ಶ್ರೀಮಹಾಲಕ್ಷ್ಮಿ ಪೂಜೆಯ ಮಾಡಿದವರಿಗೆ ಭೀಮೇಶಕೃಷ್ಣ ತಾನೊಲಿವ || ೧೧೯ ||

|| ಶ್ರೀಕೃಷ್ಣಾರ್ಪಣಮಸ್ತು ||

 

 

 

 

 

 

 

 

 

 

 

 

 

ನಿಮ್ಮದೊಂದು ಉತ್ತರ

*

This site uses Akismet to reduce spam. Learn how your comment data is processed.